For the best experience, open
https://m.hosakannada.com
on your mobile browser.
Advertisement

Actress leelavati: ಲೀಲಾವತಿ ಹಿಂದೂ ಅಲ್ಲ ಕ್ರಿಶ್ಚಿಯನ್, ಲೀನಾ ಸಿಕ್ವೇರಾ ಲೀಲಾವತಿ ಆದ ಕಥೆ ! ಸೈಕಲ್ ಏರಿದ್ದಕ್ಕೆ ಹೊಡೆದ್ರು, ಹಾಗಾದ್ರೆ ಸಿನಿಮಾ ಸೇರಲು ಹೇಗೆ ಬಿಟ್ರು ?

01:22 PM Dec 09, 2023 IST | ಸುದರ್ಶನ್
UpdateAt: 03:06 PM Dec 09, 2023 IST
actress leelavati  ಲೀಲಾವತಿ ಹಿಂದೂ ಅಲ್ಲ ಕ್ರಿಶ್ಚಿಯನ್  ಲೀನಾ ಸಿಕ್ವೇರಾ ಲೀಲಾವತಿ ಆದ ಕಥೆ   ಸೈಕಲ್ ಏರಿದ್ದಕ್ಕೆ ಹೊಡೆದ್ರು  ಹಾಗಾದ್ರೆ ಸಿನಿಮಾ ಸೇರಲು ಹೇಗೆ ಬಿಟ್ರು

Actress leelavati: ಕನ್ನಡದ ವರನಟಿ ಲೀಲಾವತಿ ನಿನ್ನೆ ಅಸ್ತಂಗತರಾಗಿದ್ದಾರೆ. ಲೀಲಾವತಿಯವರು 1949 ರಲ್ಲಿ ಶಂಕರ್ ಸಿಂಗ್ ರವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದ್ದೇ ಪ್ರಾರಂಭ, ತದನಂತರ ಕನ್ನಡ ಚಿತ್ರರಂಗದಲ್ಲಿ ಆಕೆಯದ್ದು ಆಕಾಶದೆಡೆಗಿನ ಏರು ನಡಿಗೆ. ಮೊದಲಿಗೆ ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ 'ಕಯಾದು'ವಿನ ಸಖಿಯಾಗಿ ಅಭಿನಯಿಸಿದ್ದರು. ನಂತರದಲ್ಲಿ ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು.

Advertisement

ಲೀಲಾವತಿಯಾಗಿ( Actress leelavati)ಚಿತ್ರರಂಗದಲ್ಲಿ ಬೆಳೆದು ಬೆಳಗಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ತನ್ನ ಮನೋಜ್ಞ ಅಭಿನಯದ ಮೂಲಕ ಕನ್ನಡದ ಮನೆ ಮಾತಾಗಿದ್ದು ಪಂಚ ಭಾಷಾ ತಾರೆಯಾಗಿ ಮಿನುಗಿದವರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಗಳ ಚಿತ್ರಗಳಲ್ಲಿ ಮಿನುಗಿ ಇದೀಗ ಮರೆಯಾಗಿರುವುದು ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇವತ್ತು ನಾವಿಲ್ಲಿ ಆಕೆಯ ಬಗ್ಗೆ ಹೆಚ್ಚು ತಿಳಿಯದ, ಲೀಲಾವತಿಯವರ ಇನ್ನೊಂದು ಆ ಮುಖದ ಬಗ್ಗೆ ಒಂದಷ್ಟು ಬೆಳಕು ಚೆಲ್ಲಲು ಪ್ರಯತ್ನಿಸುತ್ತಿದ್ದೇವೆ.

Advertisement

ನಟಿ ಲೀಲಾವತಿ( Actress leelavati) ಹಿಂದೂ ಕುಟುಂಬದಲ್ಲಿ ಹುಟ್ಟಿರಲಿಲ್ಲ ಹೌದು ಆಕೆ ಹುಟ್ಟಿದ್ದು ಕ್ರಿಶ್ಚಿಯನ್ ಕುಟುಂಬ ಒಂದರಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುರ ಎಂಬಲ್ಲಿ ಸಾಮಾನ್ಯ ಕ್ರಿಶ್ಚಿಯನ್ ಕುಟುಂಬವೊಂದರಲ್ಲಿ ಜನಿಸಿದ ಲೀಲಾ ಸಿಕ್ವೇರಾರ ಬಾಲ್ಯ ಏನೇನು ಚೆನ್ನಾಗಿರಲಿಲ್ಲ. ಕೇವಲ 6 ವರ್ಷ ಇರುವಾಗ ಅಪ್ಪ ಅಮ್ಮ ಇಬ್ಬರೂ ಇಲ್ಲದ ತಬ್ಬಲಿಯಾಗಿದ್ದರು ಲೀಲಾ.
ಲೀಲಾವತಿಯವರ ಮೂಲ ಹೆಸರು ಲೀನಾ ಸಿಕ್ವೇರಾ. ಅವರ ಸಹೋದರಿ ಅಂಜಲಿನಾ ಸಿಕ್ವೇರಾ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಅವರನ್ನು ದೊಡ್ಡಪ್ಪನ ಮಗಳಾದ ಲೂಸಿ ಸಿಕ್ವೇರಾ ಸಹೋದರಿ ಲೀನಾ ಮತ್ತು ಅಂಜಲಿನಾ ಅವರನ್ನು ಸಲಹುತ್ತಿದ್ದರು. ಚುರುಕುತನ ಅವರ ರಕ್ತದಲ್ಲಿಯೆ ಇತ್ತು. ಹಾಗೂ ನಾಟ್ಯದಲ್ಲಿ ಅಕ್ಕ ತಂಗಿ ಇಬ್ಬರಿಗೂ ತೀವ್ರ ಆಸಕ್ತಿಯಿತ್ತು. ನೃತ್ಯ ಪಟುವಾಗಿದ್ದ ಸಹೋದರಿಯರು ನೃತ್ಯ ತರಬೇತಿ ನೀಡುತ್ತಿದ್ದರಂತೆ. ಲೀಲಾವತಿಗೆ ಎಲ್ಲು, ಲಿಲ್ಲಿ ಯಾನೆ ಲೀನಾ ಎಂಬ ಉಪನಾಮವೂ ಇತ್ತೆಂದು ಅವರ ಜತೆಗೆ ಬಾಲ್ಯ ಕಳೆದ ಬೆಳ್ತಂಗಡಿ ತಾಲೂಕಿನ ನಾವೂರಿನ ಅಣ್ಣಿ ಮೂಲ್ಯ ಮತ್ತು ಕರ್ಮಿನಾ ಡಿ’ಸಿಲ್ವಾ ತಮ್ಮ ನೆನಪುಗಳನ್ನು ನಿಧಾನಕ್ಕೆ ಹೆಕ್ಕಿ ತೆಗೆದು ಹೇಳುತ್ತಿದ್ದಾರೆ.

ತದನಂತರ ಲೀಲಾವತಿ ಮಂಗಳೂರಿಗೆ ಬಂದರು. ಲೀಲಾವತಿಯ ಕೌಮಾರ್ಯ ಹೆಚ್ಚಿನ ಸಮಯ ಬೆಳ್ತಂಗಡಿ ತಾಲೂಕಿನಲ್ಲಿ ಕಳೆಯಿತು. ಆಕೆ ಅಲ್ಲೇ ಮುರ ಎಂಬಲ್ಲಿ ನಾಲ್ಕನೆಯ ತರಗತಿಯವರೆಗೆ ಓದಿದ್ದರು. ಮುಂದೆ ರಂಗಭೂಮಿಯ ಆಕರ್ಷಣೆಯಿಂದಾಗಿ ಲೀಲಾವತಿಯವರು ಮಂಗಳೂರು ಸೇರಿಕೊಂಡರು. ನಂತರ ಮೈಸೂರಿಗೆ ರಂಗ ಪ್ರಯಾಣ. ಅನಿವಾರ್ಯತೆ ಇತ್ತು: ಹಾಗೆ ಚಿತ್ರರಂಗಕ್ಕೆ ಬಂದರು, ಸಕ್ಸಸ್ ಕೂಡಾ ಕಂಡ್ರು. ಚಿಕ್ಕಂದಿನಲ್ಲಿ ಸೈಕಲ್ ಕಲಿಯುವುದಕ್ಕೆ ಕೂಡ ಮನೆಯಲ್ಲಿ ಅಡ್ಡಿಯಿತ್ತು. ಒಂದು ಸಾರಿ ಲೀಲಾವತಿಯವರು ಮಗುವಿನ ಸಹಜ ಆಸೆಯಂತೆ ಸೈಕಲ್ ಏರಿದ್ದಕ್ಕೆ ದೊಡ್ಡಪ್ಪನಿಂದ ಏಟು ಕೂಡ ಸಿಕ್ಕಿತ್ತು. ಅಂತಹ ಕುಟುಂಬದಿಂದ ಬಂದ ಹುಡುಗಿ ರಂಗಭೂಮಿಯ ಮೂಲಕ ಸಿನಿಮಾ ಅವರಿಗೆ ಸಾಗಿ ಬಂದದ್ದೇ ರೋಚಕ ಮತ್ತು ಪ್ರಯಾಸದ ಪ್ರಯಾಣ. ಆಕೆಯ ಬಗೆಗಿನ ಚಿತ್ರರಂಗದ ಬಗೆಗಿನ ಸಾಕಷ್ಟು ಮಾಹಿತಿಗಳನ್ನು ನೀವು ಈಗಾಗಲೇ ಕೇಳಿದ್ದೀರಿ. ಇವತ್ತು ನಾವು ಆಕೆಯ ಚಿತ್ರರಂಗದ ಸಾಧನೆಯನ್ನು ಬಿಟ್ಟು ಇನ್ನುಳಿದ ಕ್ಷೇತ್ರಗಳಲ್ಲಿ ಆಕೆ ತೋರಿದ ಮುತ್ಸದ್ದಿತನದ ಬಗ್ಗೆ ಮತ್ತು ಓರ್ವ ವ್ಯಕ್ತಿಯಾಗಿ ಲೀಲಾವತಿಯವರನ್ನು ನೋಡುವ ಸಮಯ. ಆಕೆ 1955 ರ ಸುಮಾರಿಗೆ, ಪ್ರತಿ ಭಾನುವಾರಗಳಂದು ಬೆಳ್ತಂಗಡಿಯ ಚರ್ಚ್ ಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದರು ಎನ್ನುವ ಬಗ್ಗೆ ಆಕೆಯ ಹಳೆಯ ಸ್ನೇಹಿತರುಗಳು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿಯ ತನಕ, ಆಕೆ ಹಿಂದೂ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿಯೆ ಎಂದು ಭಾವಿಸುವಂತೆ ಲೀಲಾವತಿ ಎಂಬ ಹೆಸರಿನಲ್ಲಿ ಹಿಂದೂ ಸಂಪ್ರದಾಯದಲ್ಲಿ ಬದುಕಿ ಬಾಳಿದರು ಅಭಿಜಾತ ಲೀಲಾವತಿ.

ಲೀಲಾವತಿಯವರು( Actress leelavati) ವೈಯಕ್ತಿಕ ಜೀವನದಲ್ಲಿ ಕಹಿ ಉಂಡಿದ್ದರು. ಬಗಲಲ್ಲಿ ಮಗನನ್ನು ಇಟ್ಟುಕೊಂಡು ಓರ್ವ ಅಮ್ಮನಾಗಿ ಅಪ್ಪನಾಗಿ ಪೋಷಿಸುತ್ತಿದ್ದರು. ಅಪ್ಪ ಯಾರೆಂದು ಹೇಳಲು ಕೂಡಾ ಆಗದಂತಹ ಸಂದಿಗ್ದ ಸ್ಥಿತಿಯಲ್ಲಿ ಲೀಲಾವತಿ ತನ್ನ ಇಡೀ ಜೀವನವನ್ನು ಕಳೆದರು. ಕರೇಜಿಯಸ್ ಪತ್ರಕರ್ತ, ಸಾಹಿತಿ ರವಿ ಬೆಳಗೆರೆಯವರು, ಲೀಲಾವತಿಯವರನ್ನು ಭೇಟಿಯಾಗಿ ಅವರ ಬದುಕಿನ ಒಳ ಗುಟ್ಟುಗಳ ಬಗ್ಗೆ ಪುಸ್ತಕ ಬರೆಯುವವರೆಗೆ ಲೀಲಾವತಿ ಮತ್ತು ಡಾಕ್ಟರ್ ರಾಜಕುಮಾರ್ ಅವರ ಮಧ್ಯೆ ಇದ್ದ ಬಾಂಧವ್ಯ ಮತ್ತು ಸಂಬಂಧಗಳ ಬಗ್ಗೆ ಪಬ್ಲಿಕ್ ಆಗಿ ಮಾತಾಡುವವರು ಯಾರೂ ಕೂಡಾ ಇರಲಿಲ್ಲ. ಅಷ್ಟರವರೆಗೆ ಕೇವಲ ಗಾಸಿಪ್ಗಳಲ್ಲಿ ಇದ್ದ ವಿಷಯವನ್ನು ಬೆಳಗೆರೆಯವರು ಮಾಧ್ಯಮಕ್ಕೆ ಎಳೆದು ತಂದರು. ಆ ಪುಸ್ತಕ ಬಿಡುಗಡೆಯಾದ ದಿನ ಲೀಲಾವತಿಯವರಿಗೆ ಒಂದು ತರದ ನಿರಾಳ. ಇಷ್ಟು ದಿನ ಮನದಲ್ಲಿ ಅದುಮಿ ಹಿಡಿದಿದ್ದ ಸತ್ಯವನ್ನು ಘಂಟಾಘೋಷವಾಗಿ ಕರ್ನಾಟಕದ ಜನತೆಗೆ ಹೇಳಿ ನಿಸುರಾದ ಸಂದರ್ಭವದು.

ಗಂಡ ಯಾರೆಂದು ಹೇಳಲಾಗದೆ ತೊಳಲಾಡಿದ ಲೀಲಾವತಿಯವರು(Actress leelavati) 600 ಸಿನಿಮಾ ಮಾಡಿದ್ದಾರಲ್ಲ. ಅದರಲ್ಲಿ ಗಳಿಸಿದ ಹಣವನ್ನು ಮಗನಿಗಾಗಿ ಎತ್ತಿ ಇಟ್ಟಿದ್ದರು. ದೊಡ್ಡದಾಗಿ ಬೆಳೆಸುವ ಮತ್ತು ಭವಿಷ್ಯಕ್ಕಾಗಿ ಒಂದಿಷ್ಟು ಕೂಡಿರುವ ಬುದ್ದಿ ಲೀಲಾವತಿಯವರಿಗೆ ಇತ್ತು. ಹಿಂದೆ ಅದೆಷ್ಟೋ ನಟ ನಟಿಯರು ದುಡಿದು ಬಂದುದರಲ್ಲಿ ಎಲ್ಲವನ್ನೂ ಖರ್ಚು ಮಾಡಿ, ಶೋಕಿ ಮಾಡಿ ಕೊನೆಗಾಲದಲ್ಲಿ ಕಷ್ಟಪಟ್ಟ, ಇರುವುದೆಲ್ಲವನ್ನೂ ಕಳಕೊಂಡು ಬೇರೆಯವರ ಸಹಾಯ ಬೇಡುವ ಮಟ್ಟಕ್ಕೆ ಬಂದ ಸಂದರ್ಭದಲ್ಲಿ, ಲೀಲಾವತಿ ಹಾಗೆ ಮಾಡಲಿಲ್ಲ. ಆಕೆ ಕೂಡಿಡುವ ಬುದ್ಧಿ ಪ್ರದರ್ಶಿಸಿದ್ದರು. ಹತ್ತು ಸಾವಿರದಿಂದ ಹಿಡಿದು ಕೆಲವೇ ಲಕ್ಷಗಳ ತನಕ ಹೂಡಿಕೆ ಶುರುಮಾಡಿದರು. ಅದೂ, ಭೂಮಿಯ ಮೇಲೆ. ಅಲ್ಲಿಲ್ಲಿ ಯಾರು ಕದಿಯಲಾಗದ ಆಸ್ತಿ ಮಾಡಲು ಲೀಲಾವತಿಯವರು ಹೊರಟಿದ್ದರು. ಅದರಂತೆ ಬೆಂಗಳೂರಿನಲ್ಲಿ, ಮಂಗಳೂರಿನಲ್ಲಿ ಮತ್ತು ಚೆನ್ನೈನಲ್ಲಿ ಹೀಗೆ ಹಲವು ಕಡೆ ಸಣ್ಣ ಸಣ್ಣ ವ್ಯಾಪ್ತಿಯಲ್ಲಿ ಬರುವ ತನ್ನದೇ ಉತ್ಪತ್ತಿಯಲ್ಲಿ ಹಣವನ್ನು ಉಳಿಸಿ ಬಳಸಿ ಆಸ್ತಿ -ತೋಟ - ಸೈಟು ಮುಂತಾದವುಗಳನ್ನು ಕೊಂಡಿಟ್ಟರು. ಇತರರಿಗಿಂತ ವಿಭಿನ್ನವಾಗಿ ಆಕೆ ಕೃಷಿಯತ್ತ ಆಕೆ ಆಕರ್ಷಿತಳಾಗಿದ್ದು ಮಾತ್ರ ವಿಶೇಷ. ಬಹುಶ: ಅದಕ್ಕೆ ಆಕೆ ಹುಟ್ಟಿದ ಊರು ಕೂಡ ಕಾರಣ ಇರಬಹುದು.

ಆಕೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದರು ಹಲವು ಗುಟ್ಟುಗಳನ್ನು ತನ್ನೊಳಗೆ ಇಟ್ಟುಕೊಂಡಿದ್ದರು. ನಿನ್ನೆ ಆಕೆ ಸಾಯುವ ತನಕ ಕೂಡ ಆಕೆ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿದ್ದರೂ ಅನ್ನುವ ಬಗ್ಗೆ ಸಾಕಷ್ಟು ಪ್ರಚಾರವಿರಲಿಲ್ಲ. ಕ್ರಿಶ್ಚಿಯನ್ ಕುಟುಂಬ ಒಂದರಲ್ಲಿ ಜನಿಸಿದ ಲೀಲಾ ಕಿರಣ್ ಕೃಷಿ ಚಟುವಟಿಕೆಗಳ ಮಧ್ಯೆ ಬೆಳೆದ ಹುಡುಗಿ. ಹಾಗಾಗಿಯೇನೋ ಬದುಕಿನ ಭದ್ರತೆಗಾಗಿ ಜಾಗ ಮಾಡಿದವರು ಅಲ್ಲಿ ಕೃಷಿ ಮಾಡಿದರು, ತೋಟ ನಿರ್ಮಿಸಿದರು. ಕೊಂಚ ವಿಸ್ತಾರವಾದ ಜಾಗಗಳನ್ನು ಕೊಂಡರು, ಹಾಗೆ ಅದು ತನ್ನಿಂದ ತಾನೇ ಎಸ್ಟೇಟ್ ಆಯಿತು.
ಒಂದು ಕಾಲಕ್ಕೆ ಕೇವಲ ಒಂದು 30 40 ಸೈಟ್ ನಿಂದ ಶುರುವಾದ ಲೀಲಾವತಿಯವರ ಆಸ್ತಿ ಒಂದೊಮ್ಮೆ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ 17.5 ಎಕರೆವರೆಗೆ ವಿಸ್ತರಿಸಿಕೊಂಡಿತು. ಪ್ರಾಯಶ: ಜಾಗದ ಮೇಲೆ ಆಕೆ ಮಾಡಿದ ಹೂಡಿಕೆಯಿಂದಲೇ ಇರಬೇಕು, ಕೊನೆಗಾಲದಲ್ಲಿ ಯಾರ ಕೈಯಲ್ಲೂ ಬೇಡಿಕೊಳ್ಳದ ಹಾಗೆ ಸ್ವಾಭಿಮಾನದಿಂದ ಬದುಕಿದವರು ಲೀಲಾವತಿ ಮತ್ತು ಆಕೆಯ ಪುತ್ರ ವಿನೋದ್ ರಾಜಕುಮಾರ್ !
ಬಂದದ್ದನ್ನು ಉಳಿಸಿಕೊಳ್ಳುವುದು, ಅದು ಎಷ್ಟೇ ನಿಧಾನಗತಿಯಲ್ಲಿ ಆಗಲಿ, ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಬೆಳೆಸಿಕೊಳ್ಳುವ ಬುದ್ದಿ ಲೀಲಾವತಿಯವರಿಗೆ ಇತ್ತು. ಅದನ್ನೇ ತಮ್ಮ ಮಗನಿಗೆ ಅವರು ಆಗಾಗ ತಿಳಿ ಹೇಳುತ್ತಿದ್ದರು. ಇದೀಗ ಮಗ ಕೃಷಿಯಲ್ಲಿ ಲೀಲಾಜಾಲ. ಜತೆಗೆ, ಪೋಸ್ಟ್ ಆಫೀಸ್ ಡಿಪೋಸಿಟ್ ಫಿಕ್ಸೆಡ್ ಮ್ಯೂಚುವಲ್ ಫಂಡ್ಸ್, ಸ್ಟಾಕ್ ಅಂಡ್ ಶೇರ್ಸ್ ನ್ಯಾಷನಲ್ ಶೇವಿಂಗ್ ಸರ್ಟಿಫಿಕೇಟ್ ಅಲ್ಲದೆ, ಇತರ ಹಲವು ಪ್ರಕಾರಗಳ ಆರ್ಥಿಕ ಹೂಡಿಕೆಗಳಲ್ಲಿ ಅನುಭವ ಹೊಂದಿ ಆರ್ಥಿಕ ಶಿಸ್ತನ್ನು ಪಾಲಿಸುತ್ತಿರುವವರು.

ಇತ್ತೀಚೆಗೆ ತಮ್ಮ ಒಂದೊಂದೇ ಪ್ರಾಪರ್ಟಿಗಳನ್ನು ಮಾರಿದ ನಟಿ ಲೀಲಾವತಿಯವರು ನೆಲಮಂಗಲದ ಸೋಲದೇವನಹಳ್ಳಿ ಬಳಿ ಪುತ್ರ ವಿನೋದ್ ರಾಜ್ ಜೊತೆ ವಾಸವಾಗಿದ್ದರು. ಸಿನಿಮಾದಿಂದ ದೂರ ಉಳಿದುಕೊಂಡಿದ್ದ ಅವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ವಿನೋದ್ ರಾಜ್ ಕೂಡ ಕೃಷಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಮನೆಯೊಂದನ್ನು ಕಟ್ಟಿಕೊಂಡು, ಸ್ವಲ್ಪ ಜಾಗವನ್ನು ಕೃಷಿಗೆ ಬಳಸಿಕೊಂಡು ಉಳಿದ ಜಾಗಗಳಲ್ಲಿ ಸೈಟ್ ಮಾಡಿ ಮಾರುವ ಮೂಲಕ ಆರ್ಥಿಕವಾಗಿ ಮಗಳನ್ನು ಇನ್ನಷ್ಟು ಬಲಿಷ್ಠನನ್ನಾಗಿ ಮಾಡುವ ಇರಾದೆ ಅಮ್ಮ ಲೀಲಾವತಿಗೆ ಇತ್ತು.

ಆದ್ರೆ ಇತ್ತೀಚೆಗೆ ಲೀಲಾವತಿ ಅನಾರೋಗ್ಯ ಬಿಗಡಾಯಿಸಿತ್ತು. ವಿಷಯ ತಿಳಿದ ಬಳಿಕ ಕನ್ನಡ ಚಿತ್ರರಂಗದ ಅನೇಕರು ಸೋಲದೇವನಹಳ್ಳಿಗೆ ಬಂದು ಆರೋಗ್ಯ ವಿಚಾರಿಸಿದ್ದರು. ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ದರ್ಶನ್, ಅಭಿಷೇಕ್ ಅಂಬರೀಷ್, ಅರ್ಜುನ್ ಸರ್ಜಾ, ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಬಂದು ವಿನೋದ್ ರಾಜ್ ಗೆ ಧೈರ್ಯ ತುಂಬಿದ್ದರು. ಹಾಗೆ ಆಸ್ಪತ್ರೆ ಸೇರಿದವರು ಮತ್ತೆ ಲೀಲಾವತಿ ಮನೆಗೆ ಮರಳಲೇ ಇಲ್ಲ. ಜೀವನದಲ್ಲಿ ನೊಂದ ಜೀವ ಲೀಲಾವತಿಯವರು ತೀರಿಕೊಂಡಿದ್ದರೂ ಕೂಡಾ ಮಗನಿಗೆ, ಸಾಕಷ್ಟು ಆಸ್ತಿಪಾಸ್ತಿ ಬಿಟ್ಟು ಹೋಗಿದ್ದಾರೆ. ಜೊತೆಗೆ ಚಿತ್ತರಂಗದ ಜೊತೆಗಿನ 50 ವರ್ಷಗಳ ಅನುಭವ ಮತ್ತು ನೆನಪುಗಳನ್ನು ಹಚ್ಚ ಹಸಿರಾಗಿ ಇರಿಸಿ ಹೋಗಿದ್ದಾರೆ.

ಇದನ್ನೂ ಓದಿ: BJP: ಬಿಜೆಪಿಯ 'ಕಮಲ' ಚಿಹ್ನೆ ಬದಲಾವಣೆ ?!

Advertisement
Advertisement