Renukaswamy Murder Case: ಸಾಕ್ಷ್ಯ ನಾಶ ಮಾಡಲೆಂದು ಬಂದವರೇ ಇದೀಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ
Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ 17 ಮಂದಿ ಆರೋಪಿಗಳಾಗಿದ್ದು, ಪೊಲೀಸರ ಪ್ರಕಾರ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೊಲೆ ಹಾಗೂ ಅಪಹರಣದಲ್ಲಿ ಭಾಗಿಯಾಗಿದ್ದಾರೆ. ಕುತೂಹಲಕಾರಿ ಸಂಗತಿ ಏನೆಂದರೆ ಈ ಪ್ರಕರಣದಲ್ಲಿ ಈ ಮೊದಲು ಬಂಧಿತರಾಗಿರುವ ಆರೋಪಿಗಳೇ ಈಗ ಸಾಕ್ಷಿಗಳಾಗಿದ್ದಾರೆ. ಇದೊಂದು ಮಹತ್ವದ ತಿರುವು ನೀಡಿದಂತ ವಿಷಯ. ಯಾರನ್ನು ಸಾಕ್ಷ್ಯ ಮಾಡಿ ಎಂದು ಡಿ ಗ್ಯಾಂಗ್ ಹೇಳಿದೆಯೋ ಅವರೇ ಈಗ ಈ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿದ್ದಾರೆ.
ರೇಣುಕ ಸ್ವಾಮಿಯ ಕೊಲೆಯಾದ ನಂತರ ಶವ ಎಸೆಯಲೆಂದು ಮೂವರನ್ನು ನಿಗದಿಪಡಿಸಲಾಯ್ತು. ಇವರಿಗೆ ತಲಾ ಐದು ಲಕ್ಷ ರೂಪಾಯಿ ನೀಡಿ ಶವ ವಿಲೇವಾರಿ ಮಾಡುವುದು ಮಾತ್ರವಲ್ಲದೇ, ಒಂದು ವೇಳೆ ರೇಣುಕಾಸ್ವಾಮಿ ಶವ ಪೊಲೀಸರಿಗೆ ದೊರೆತರೆ ಅವರಿಗೆ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳಬೇಕು ಎಂಬ ಮಾತಾಗಿತ್ತು. ಅದರಂತೆ ವಿ ಪ್ರಕಾಶ್, ನಿಖಿಲ್ ನಾಯಕ್, ಕಾರ್ತಿಕ್ ಅಲಿಯಾಸ್ ಕಪ್ಪೆ ಇವರುಗಳು ಶವ ಕಾಲುವೆಗೆ ಎಸೆದು, ನಂತರ ಶವ ದೊರೆತ ಬಳಿಕ ಪೊಲೀಸರ ಎದುರು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.
ಈಗ ಈ ಕೊಲೆ ಪ್ರಕರಣದಲ್ಲಿ ಈ ಮೂವರು ಆರೋಪಿಗಳೇ ಪ್ರಮುಖ ಸಾಕ್ಷ್ಯಗಳಾಗಿದ್ದಾರೆ. ಇವರಿಗೆ ಸಿಆರ್ಪಿಸಿ 164 ರ ಅಡಿಯಲ್ಲಿ ಸಾಕ್ಷ್ಯಗಳ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿದ್ದು ಮಾತ್ರವಲ್ಲದೇ ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೇ ಈ ಮೂವರು ಆರೋಪಿಗಳಿಗೆ ಸಂಬಂಧಪಟ್ಟಂತೆ ಇತರೆ ಕೆಲವು ಸಾಕ್ಷ್ಯಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ರೇಣುಕಾಸ್ವಾಮಿ ಶವ ಎಸೆಯಲು ಬಳಸಿದಿ ವಾಹನ, ಸಿಸಿಟಿವಿ ದೃಶ್ಯಾವಳಿಗಳು, ಶವ ಎಸೆದ ನಂತರ ಆಟೋದಲ್ಲಿ ಪ್ರಯಾಣ ಇವೆಲ್ಲವನ್ನು ಪರಿಗಣಿಸಲಾಗಿದ್ದು, ಅಷ್ಟು ಮಾತ್ರವಲ್ಲದೇ ಆಟೋ ಚಾಲಕನನ್ನು ಪತ್ತೆ ಮಾಡಲಾಗಿದ್ದು, ಆತನ ವಿಚಾರಣೆ ಕೂಡಾ ಮಾಡಲಾಗಿದೆ. ಆಟೋ ಚಾಲಕನಿಂದ ಗುರುತು ಪತ್ತೆ ಮಾಡಲಾಗಿದೆ.
ಇದರ ಜೊತೆಗೆ ದರ್ಶನ್ ಗ್ಯಾಂಗ್ನಿಂದ ಹಣ ಪಡೆದಿದ್ದಾರೆ ಎನ್ನಲಾಗುತ್ತಿರುವ ಹಣವನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.
ರೇಣುಕಾಸ್ವಾಮಿ ಶವವನ್ನು ಕಾಲುವೆಗೆ ಎಸೆದ ನಂತರ ಕಾರ್ತಿಕ್ ಅಲಿಯಾಸ್ ಕಪ್ಪೆ, ನಿಖಿಲ್ ನಾಯಕ್ ಆಟೋ ಹತ್ತಿ ನಾಯಂಡಹಳ್ಳಿಯವರೆಗೆ ಹೋಗಿದ್ದರ ಮಾಹಿತಿ ಪೊಲೀಸರಲ್ಲಿದೆ.
ಈ ಹೈಪ್ರೊಫೈಲ್ ಕೊಲೆ ಪ್ರಕರಣದ ಒಟ್ಟು 17 ಆರೋಪಿಗಳಲ್ಲಿ 14 ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿದೆ. ಈ ಪ್ರಕರಣದಲ್ಲಿ ಸಾಕ್ಷಿಯಾಗಿರುವ ನಿಖಿಲ್ ನಾಯಕ್, ಕಾರ್ತಿಕ್, ಪ್ರಕಾಶ್ ಆರೋಪಿಗಳನ್ನು ತುಮಕೂರು ಜೈಲಿನಲ್ಲಿ ಇರಿಸಲಾಗಿದೆ. ಇತರೆ ಆರೋಪಿಗಳು ಇವರ ಮೇಲೆ ಪ್ರಭಾವ ಬೀರಬಹುದು ಎನ್ನುವ ಕಾರಣಕ್ಕೆ ಈ ನಿರ್ಣಯ ಮಾಡಲಾಗಿದೆ.