Pradeep Eshwar: ಡಾ.ಸುಧಾಕರ್ ಪಾರ್ಲಿಮೆಂಟ್ ಮೆಟ್ಟಿಲು ಹತ್ತೋಕೆ ಕೂಡಾ ನಾವು ಬಿಡಲ್ಲ: ಪ್ರದೀಪ್ ಈಶ್ವರ್ ಟಾಂಗ್ !
Pradeep Eshwar: ಯಾವುದು ಏನೇ ಆಗಲಿ, ಡಿ. ಸುಧಾಕರ್'ರನ್ನು (D. Sudhakar) ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೂ ನಾವು ಬಿಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಡಾ. ಕೆ.ಸುಧಾಕರ್ ಗೆ ಟಿಕೆಟ್ ನೀಡಿರುವ ಕುರಿತು ಮಾತನಾಡಿ, ನಿನ್ನೆ ಬಿಜೆಪಿ ರಿಲೀಸ್ ಮಾಡಿದ ಲಿಸ್ಟ್ ನೋಡಿದಾಗಿನಿಂದ ಪ್ರಜಾಪ್ರಭುತ್ವ ಸಾಯುವುದಕ್ಕೆ ಮುನ್ನುಡಿ ಹಾಕಲಾಗಿದೆ ಅಂತ ಅನಿಸಿದೆ. ಕೋವಿಡ್ ನಲ್ಲಿ 2,200 ಕೋಟಿ ಹಗರಣದ ಆರೋಪ ನಮ್ಮ ಸರ್ಕಾರ ಮಾಡಿತ್ತು. ಬಸನ ಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ನಾಯಕರ ವಿರುದ್ಧ 40,000 ಕೋಟಿ ರೂಪಾಯಿ ಹಗರಣದ ಆರೋಪ ಮಾಡಿದರು. ಇವರಿಗೆ ಟಿಕೆಟ್ ಹೇಗೆ ಸಿಕ್ತು? ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಸುಧಾಕರ್ ಸಹಾಯ ಮಾಡಿದ್ದಾರೆ. ಯಾವ ಥರದ ಸಹಾಯ ಅಂದ್ರೆ, ಸೂರ್ಯ ನಮಸ್ಕಾರ, ಕಪಾಲಿ ಭಾತ್,ಶವಾಸನ, ದೀರ್ಘ ದಂಡ ನಮಸ್ಕಾರ ಮುಂತಾದವನ್ನು ಮಾಡಿಸಿದ್ದಾರೆ ಅನಿಸುತ್ತದೆ. ಇದೆಲ್ಲವನ್ನೂ ಆ ನಾಯಕರಿಗೆ ಮಾಡಿಸಿದ್ದಕ್ಕೆ ಬಹುಶಃ ಸುಧಾಕರ್'ಗೆ ಟಿಕೆಟ್ ಸಿಕ್ಕಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಡಿ ಸುಧಾಕರ್ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ ಪ್ರದೀಪ ಈಶ್ವರ್, 'ಪಾರ್ಲಿಮೆಂಟ್ ಪವಿತ್ರವಾದ ಜಾಗ. ಆದರೆ ಹುಕ್ ಆರ್ ಕ್ರುಕ್ ಸುಧಾಕರ್'ರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೂ ನಾವು ಬಿಡುವುದಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಂತುಕೊಳ್ಳಲಿ. ಸುಧಾಕರ್'ಗೆ ಪಾರ್ಲಿಮೆಂಟ್'ಗೆ ಹೋಗೋದಕ್ಕಂತೂ ಬಿಡುವುದಿಲ್ಲ' ಎಂದು ಪ್ರದೀಪ್ ಸವಾಲು ಹಾಕಿದ್ದಾರೆ.
" ಡಾ.ಕೆ ಸುಧಾಕರ್ ಅವರೊಂದು ಥರಾ ವಿಚಿತ್ರ ರಾಜಕಾರಣಿ. ಸುಧಾಕರ್ ನನ್ನನ್ನು ಏನು ಬಿಡೋದು, ನಾನೇ ಅವರ್ನ ಬಿಡಲ್ಲ. ಅವರು ಬಂದ್ರೆ ಕಾನೂನು ಸುವ್ಯವಸ್ಥೆ ಒಟ್ಟು ಹಾಳಾಗತ್ತೆ. ಅವರು ಭ್ರಷ್ಟಾಚಾರ ಮಾಡಿದ್ದಾರೆ ಅಂತ ಅವರದೇ ಪಕ್ಷದವರು ಹೇಳಿದ್ದಾರೆ. ಅವರ ಅಹಂಕಾರದ ಬಗ್ಗೆ ಅವರದೇ ಪಕ್ಷದ ನಾಯಕರಿಗೆ ಅಸಮಾಧಾನವಿದೆ. ಮೆಡಿಕಲ್ ಕಾಲೇಜ್, ಕ್ರಷರ್ ಮಾಲೀಕರಿಂದ ಕಿಕ್ ಬ್ಯಾಕ್ ಪಡೆದುಕೊಂಡ ಆರೋಪ ಅವರ ಮೇಲಿದೆ. ಅವರ ಫ್ಯಾಮಿಲಿ ಅಕೌಂಟ್, ಅವರ ಬಾಮೈದನ ಅಕೌಂಟ್ ಡೀಟೇಲ್ಸ್ ಹೊರಗಡೆ ಇಡಾಕೆ ಅವ್ರು ಸಿದ್ಧ ಇದಾರಾ? ನಾನು ನನ್ನ ಹಾಗೂ ನನ್ನ ಕುಟುಂಬದ ಅಕೌಂಟ್ ಡೀಟೈಲ್ಸ್ ಎದುರಿಗೆ ಇಡ್ತೆ. ನಾನ್ ಮೇಲ್ ಐಟಿ, ಇಡಿ ಏನೇ ದಾಳಿಯಾಗಲಿ ನಾನು ಹೆದ್ರಲ್ಲ. ಸುಧಾಕರ್ ಆರೋಗ್ಯ ಸಚಿವರಾಗಿ ಮಾಡದೇ ಇರುವ ಕೆಲಸ ನಾನೊಬ್ಬ ಶಾಸಕನಾಗಿ ಮಾಡಿದ್ದೇನೆ" ಎಂದು ಅವರು ಹೇಳಿದ್ದಾರೆ.
ಯಾರೋ ಸೆಲೆಬ್ರಿಟಿ ಬಂದು ವೋಟು ಕೇಳಿದರೆ ಮತ ಹಾಕಿ ಬಿಡೋ ಕಾಲ ಹೋಯ್ತು ಸುಧಾಕರ್'ವರೇ, ನಾವೇನ್ ಕಡ್ಲೆ ಬೀಜ ತಿನ್ತಾ ಇರ್ತೀವಾ? ಕೋವಿಡ್ ತನಿಖೆಯಿಂದ ತಪ್ಪಿಸಿಕೊಳ್ಳಲು ನೀವು ಯಾರ ಕಾಲ ಕೆಳಗೆ ಬೀಳ್ತಿದ್ದೀರಾ ಗೊತ್ತಿಲ್ವಾ? ಕೋವಿಡ್ ತನಿಖೆಯಿಂದ ಕಾಪಾಡಿ ಕಾಪಾಡಿ ಅಂತ ನೀವು ಹೆಂಗೆಲ್ಲ ಕಾಲಿಗೆ ಬೀಳ್ತಿದ್ದೀರಿ ಗೊತ್ತಿಲ್ವಾ ?! ಸುಧಾಕರ್ ಟಾರ್ಚರ್ನಿಂದಲೇ ನಾನು ಇವತ್ತು ಶಾಸಕನಾಗಿದ್ದೇನೆ" ಎಂದು ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.