For the best experience, open
https://m.hosakannada.com
on your mobile browser.
Advertisement

OBC-Muslim Reservation: ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ ಕರ್ನಾಟಕದ 'ಮುಸ್ಲಿಂ ಮೀಸಲಾತಿ' - ಏನಿದು 'ಒಬಿಸಿ- ಮುಸ್ಲಿಂ ಮೀಸಲಾತಿ'?

OBC-Muslim Reservation: ಸ್ವತಃ ಪ್ರಧಾನಿ ಸೇರಿ ರಾಷ್ಟ್ರೀಯ ನಾಯಕರೇ ಈ ಕುರಿತು ಕಿಡಿಕಾರಿದ್ದಾರೆ. ಪ್ರಚಾರದ ಗಿಮಿಕ್ ಆಗಿ ಇದನ್ನೇ ಬಳಸಿಕೊಳ್ಳುತ್ತಿದ್ದಾರೆ. 
09:05 AM Apr 26, 2024 IST | ಸುದರ್ಶನ್
UpdateAt: 09:16 AM Apr 26, 2024 IST
obc muslim reservation  ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ ಕರ್ನಾಟಕದ  ಮುಸ್ಲಿಂ ಮೀಸಲಾತಿ    ಏನಿದು  ಒಬಿಸಿ  ಮುಸ್ಲಿಂ ಮೀಸಲಾತಿ

OBC-Muslim Reservation: ಕರ್ನಾಟಕದಲ್ಲಿಂದು ಲೋಕಸಭಾ ಚುನಾವಣೆ ಪ್ರಯುಕ್ತ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ಇಂದು ಚುನಾವಣೆ ಮುಗಿಯುತ್ತಿದ್ದಂತೆ ಮೇ 7ರ ಎರಡನೇ ಹಂತದ ಚುನಾವಣೆಗೆ ಸಿದ್ಧತೆಗಳು ಜೋರಾಗಲಿವೆ. ಈ ನಡುವೆ ಕರ್ನಾಟಕದ ಆ ಒಂದು ವಿಚಾರ ದೇಶಾದ್ಯಂತ ಸದ್ಧು ಮಾಡುತ್ತಿದೆ. ಸ್ವತಃ ಪ್ರಧಾನಿ ಸೇರಿ ರಾಷ್ಟ್ರೀಯ ನಾಯಕರೇ ಈ ಕುರಿತು ಕಿಡಿಕಾರಿದ್ದಾರೆ. ಪ್ರಚಾರದ ಗಿಮಿಕ್ ಆಗಿ ಇದನ್ನೇ ಬಳಸಿಕೊಳ್ಳುತ್ತಿದ್ದಾರೆ.

Advertisement

ಇದನ್ನೂ ಓದಿ:  Diamond: ವಜ್ರ ಹಾಗೂ ಭೂಮಿಗಿದೆ ಅನನ್ಯ ಸಂಬಂಧ : ವಜ್ರ ರೂಪುಗೊಳ್ಳಲು ಎಷ್ಟು ವರ್ಷ ಬೇಕು ಗೊತ್ತಾ?

ಹೌದು, ನಾವು ಹೇಳುತ್ತಿರುವ ವಿಚಾರ ಅದುವೆ. 'ಒಬಿಸಿ-ಮುಸ್ಲಿಂ ಮೀಸಲಾತಿ'(OBC-Muslim Reservation) ವಿಚಾರ. ರಾಜ್ಯದಲ್ಲಿ ಸದ್ಯ ಜಾರಿಗೆ ತರಲು ಹೊರಟಿರುವ ಈ ಮೀಸಲಾತಿ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದು ದಿನಕ್ಕೊಂದು ತಿರುವು ಪಡೆಯುತ್ತಿದೆ. ಅತ್ತ ಪ್ರಧಾನಿ ಮೋದಿ, “ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ(Congress Government)ಒಬಿಸಿ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದು, ಇದೇ ಮಾದರಿಯನ್ನು ದೇಶಾದ್ಯಂತ ವಿಸ್ತರಿಸುತ್ತಿದೆ’ ಎಂದು ಹೇಳಿರುವುದು ರಾಜಕೀಯ ತಲ್ಲಣ ಮೂಡಿಸಿದೆ. ರಾಜ್ಯದಲ್ಲಿ ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ ಶುರುವಾದ ಈ ಮೀಸಲಾತಿ ಅಸ್ತ್ರದ ಆರೋಪ-ಪ್ರತ್ಯಾರೋಪಗಳಿಂದ ಮೀಸಲಾತಿ ಮೇಲಾಟ ತಾರಕಕ್ಕೇರಿದೆ. ಇದು ಯಾವ ಪಕ್ಷಕ್ಕೆ ಎಷ್ಟು ಲಾಭ ತಂದುಕೊಡುತ್ತದೆ ಎಂಬುದು ಕಾದುನೋಡಬೇಕು. ಹಾಗಿದ್ದರೆ ಏನಾದು ಒಬಿಸಿ- ಮುಸ್ಲಿಂ ಮೀಸಲಾತಿ? ಇದನ್ನು ನಾಯಕರು ವಿರೋಧಿಸುತ್ತಿರುವುದು ಏಕೆ?

Advertisement

ಇದನ್ನೂ ಓದಿ:  Hubballi: ಫಯಾಜ್ ಮೊದಲೇ ನನ್ನ ಮಗಳನ್ನು ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿದ್ದ - ಮತ್ತೊಂದು ಸತ್ಯ ಬಿಚ್ಚಿಟ್ಟ ನೇಹಾ ತಂದೆ !!

ಏನಿದು ಮುಸ್ಲಿಂ ಮೀಸಲಾತಿ?

ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯ ಜಾಡು ಹಿಡಿದು ಹೋದರೆ ಅದು 1977ರಿಂದ ಆರಂಭವಾಗುತ್ತದೆ. 1977ರಲ್ಲಿ ಎಲ್‌.ಜಿ. ಹಾವನೂರು ಆಯೋಗ ರಾಜ್ಯದ ಮೀಸಲಾತಿ ವರದಿಯನ್ನು ಸಲ್ಲಿಸಿದ್ದು, ಇದರಲ್ಲಿ ಮುಸ್ಲಿಮರಿಗೆ ಮೀಸಲಾತಿ ಬಗ್ಗೆ ಪ್ರಸ್ತಾವಿಸಿರಲಿಲ್ಲ. ಆದಾಗ್ಯೂ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು(Devraj Aras) ಅವರು ಬಿಸಿಎಂ (ಹಿಂದುಳಿದ ವರ್ಗ ಗಳು) ಪಟ್ಟಿಯಲ್ಲಿ ಮುಸ್ಲಿಮರನ್ನು ಸೇರಿಸುತ್ತಾರೆ. ನಂತರದಲ್ಲಿ ರಾಮಕೃಷ್ಣ ಹೆಗಡೆ ಅವರ ಅಧಿಕಾರಾವಧಿಯಲ್ಲೂ ಐದು ಪ್ರವರ್ಗಗಳನ್ನು ಮಾಡಿ (ಎ, ಬಿ, ಸಿ, ಡಿ, ಇ) ಮುಸ್ಲಿಂ ಸಹಿತ ರಾಜ್ಯದ ಬಹುತೇಕ ಎಲ್ಲ ಸಮುದಾಯಗಳನ್ನೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗೆ ಅನುಗುಣವಾಗಿ ಪಟ್ಟಿ ಯಲ್ಲಿ ಸೇರಿಸಿದ್ದರು. ಇದೆಲ್ಲದರ ಹೊರತಾಗಿ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಹಿಂದುಳಿದವರ ಮೀಸಲಾತಿಗೆ 1989-90ರಲ್ಲಿ ಸಲ್ಲಿಸಿದ್ದ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ವರದಿಯೇ ಆಧಾರ ಎಂದರೆ ತಪ್ಪಾಗದು.

ಮುಸ್ಲಿಮರಿಗೆ ಯಾವ ಮೀಸಲಾತಿ?

ಎಂ. ವೀರಪ್ಪ ಮೊಲಿ(Veerappa Moili) ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 1994ರಲ್ಲಿ ಚಿನ್ನಪ್ಪರೆಡ್ಡಿ ವರದಿಯ ಶಿಫಾರಸುಗಳನ್ನು ಸರಕಾರ ಜಾರಿ ಗೊಳಿಸುತ್ತದೆ. ಅದರಂತೆ ಪ್ರವರ್ಗ “2ಎ’ಯಲ್ಲಿ ಶೇ. 15ರಷ್ಟು ಮೀಸಲಾತಿ ಕಲ್ಪಿಸಲಾಗುತ್ತದೆ. ಇದರಲ್ಲಿ ಕುರುಬ, ಗಾಣಿಗ, ವಿಶ್ವಕರ್ಮ ಸಹಿತ 102 ಪ್ರಮುಖ ಜಾತಿಗಳು ಬರುತ್ತವೆ. ಇದರ ಜತೆಗೆ ಪ್ರವರ್ಗ “2ಬಿ’ ಅನ್ನು ಸೃಷ್ಟಿಸಿ ಅಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 4ರಷ್ಟು ಮೀಸಲಾತಿ ಕಲ್ಪಿಸಲಾಗುತ್ತದೆ ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್‌.ಲಿಂಗಪ್ಪ ತಿಳಿಸುತ್ತಾರೆ.

ಈಗ ಏಕೆ ವಿವಾದ?

ಈ ಮೀಸಲಾತಿ ಹುತ್ತಕ್ಕೆ 28 ವರ್ಷಗಳ ಬಳಿಕ ಅಂದರೆ 2022-23ರಲ್ಲಿ ಬಿಜೆಪಿ ಕೈಹಾಕುತ್ತದೆ. ಪಂಚಮಸಾಲಿ 2ಎ ಮೀಸಲಾತಿ ಬೇಡಿಕೆ ಹೋರಾಟ ತಾರಕಕ್ಕೇರಿದಾಗ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಈ ಹಿಂದೆ ಕಾಂಗ್ರೆಸ್‌ ಸರಕಾರ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ.4 ಮೀಸಲಾತಿಯನ್ನು ಹಿಂಪಡೆದು, ಒಕ್ಕಲಿಗ ಮತ್ತು ವೀರಶೈವ ಲಿಂಗಾಯತರಿಗೆ ತಲಾ ಶೇ.2ರಷ್ಟು ಹಂಚಿಕೆ ಮಾಡುತ್ತದೆ. ಇದನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಮೊರೆಹೋಗುತ್ತಾರೆ. ಅಲ್ಲಿ ಈ ಕ್ರಮಕ್ಕೆ ತಡೆಯಾಜ್ಞೆ ಸಿಗುತ್ತದೆ. ಅಷ್ಟೇ ಅಲ್ಲ, ನ್ಯಾಯಾಲಯದ ಸೂಚನೆ ಮೇರೆಗೆ ಮೀಸಲಾತಿ ಮುಂದುವರಿಸುವ ಮುಚ್ಚಳಿಕೆಯನ್ನೂ ಬರೆದುಕೊಡುತ್ತದೆ. ಇದೇ ವಿಚಾರವನ್ನು ಕಾಂಗ್ರೆಸ್‌ ಪ್ರತ್ಯಸ್ತ್ರವಾಗಿ ಬಿಜೆಪಿ ಮೇಲೆ ಪ್ರಯೋಗಿಸುತ್ತಿದೆ.

ರಾಷ್ಟ್ರೀಯ ಹಿಂದುಳಿದ ವರ್ಗದ ಆಯೋಗದಿಂದ ಸಮನ್ಸ್:

ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಯಾವುದೇ ವರ್ಗೀಕರಣವಿಲ್ಲದೇ ಸಾರಾಸಗಟು ಮೀಸಲು ಹಂಚಿಕೆ ವಿಚಾರ ಸಂಬಂಧ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು (ಎನ್‌ಸಿಬಿಸಿ) ಸ್ಪಷ್ಟನೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್‌ ನೀಡಿದೆ. ಈ ವಿಚಾರವನ್ನು ಸ್ವತಃ ಆಯೋಗದ ಅಧ್ಯಕ್ಷರಾದ ಹನ್ಸರಾಜ್‌ ಆಹಿರ್‌ ಖಾತರಿಪಡಿಸಿದ್ದು, ಮುಸ್ಲಿಮರಿಗೆ ಮೀಸಲು ವಿಚಾರದಲ್ಲಿ ಕರ್ನಾಟಕ ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಡೀ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಜಾತಿ ಎಂಬುದಾಗಿ ವರ್ಗೀಕರಿಸುವ ನಿರ್ಧಾರವು ಸಾಮಾಜಿಕ ನ್ಯಾಯದ ತತ್ವಗಳ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಮುಸ್ಲಿಂ ಧರ್ಮದಲ್ಲಿನ ಎಲ್ಲ ಜಾತಿ/ ಸಮುದಾಯಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ. ಹಾಗೆಯೇ ಹಿಂದುಳಿದ ವರ್ಗಗಳ ರಾಜ್ಯ ಪಟ್ಟಿಯಲ್ಲಿ ಪ್ರವರ್ಗ 2ಬಿ ಅಡಿ ಪ್ರತ್ಯೇಕವಾಗಿ ಮುಸ್ಲಿಂ ಜಾತಿ ಎಂಬುದಾಗಿ ವರ್ಗೀಕರಿಸಲಾಗಿದೆ,'' ಎಂದು ತಿಳಿಸಿದ್ದಾರೆ. ಅಲ್ಲದೆ ಈ ವಿಚಾರವಾಗಿ ಕರ್ನಾಟಕ ಸರ್ಕಾರದಿಂದ ಪಡೆದಿರುವ ಪ್ರತಿಕ್ರಿಯೆಯು ತೃಪ್ತಿಪರಕವಾಗಿಲ್ಲ. ಈ ಹಿನ್ನೆಲೆಯಲ್ಲಿಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್‌ ನೀಡಲಾಗುವುದು,'' ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?

ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಸಿದ್ದರಾಮಯ್ಯ(CM Siddaramaiah) ಮೋದಿ ಹಸಿಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಮುಸ್ಲಿಮರಿಗೆ 30 ವರ್ಷಗಳಿಂದಲೂ ಮೀಸಲಾತಿ ಇದ್ದು, ಒಬಿಸಿ ಮೀಸಲನ್ನು ಕಿತ್ತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಸಿಎಂ ಕಚೇರಿ ಸ್ಪಷ್ಪಪಡಿಸಿದ್ದು ಆಯೋಗಕ್ಕೆ ಇಂಥ ಯಾವುದೇ ಅಧಿಕಾರ ಇಲ್ಲ ಎಂದಿದೆ.

Advertisement
Advertisement