For the best experience, open
https://m.hosakannada.com
on your mobile browser.
Advertisement

Election: ಮತಗಟ್ಟೆ ಕೇಂದ್ರಗಳ ಗೋಡೆಗಳಲ್ಲಿ ಚಿತ್ರಗಳ ಚಿತ್ತಾರ

ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿ.ಪಂ.ಮೂಲಕ ಸ್ವೀಪ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
01:54 PM Mar 31, 2024 IST | Praveen Chennavara
UpdateAt: 02:00 PM Mar 31, 2024 IST
election  ಮತಗಟ್ಟೆ ಕೇಂದ್ರಗಳ ಗೋಡೆಗಳಲ್ಲಿ ಚಿತ್ರಗಳ ಚಿತ್ತಾರ

Election: ಮತದಾರರನ್ನು ಸೆಳೆಯಲಿರುವ ಸಖಿ, ಸಾಂಪ್ರದಾಯಿಕ, ವಿಶೇಷ ಚೇತನರ, ಯುವ, ಧ್ಯೇಯ ಆಧಾರಿತ ಮತಗಟ್ಟೆಗಳು

Advertisement

ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿ.ಪಂ.ಮೂಲಕ ಸ್ವೀಪ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪುತ್ತೂರು ತಾಲೂಕು ಸ್ವೀಪ್‌ ಕಾರ್ಯಕ್ರಮದಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 9 ವಿಶೇಷ ಮಾದರಿ ಮತಗಟ್ಟೆಗಳನ್ನು ರೂಪಿಸುವ ಮೂಲಕ ಮತದಾರರನ್ನು ಮತಗಟ್ಟೆಗೆ ವಿಶೇಷವಾಗಿ ಆಹ್ವಾನಿಸುವಂತಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಲೋಕಸಭಾ ಕ್ಷೇತ್ರವಾರು SVEEP (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ) ಕಾರ್ಯಕ್ರಮಗಳ ಅಡಿಯಲ್ಲಿ ಚುನಾವಣೆ ಮಹತ್ವ, ಅರಿವು ಮೂಡಿಸಲು ನಾನಾ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲೊಂದು ಮಾದರಿ ಮತಗಟ್ಟೆಗಳು.

Advertisement

ಮಾದರಿ ಮತಗಟ್ಟೆಗಳು ವರ್ಣಮಯ
ಒಟ್ಟು 5 ವಿಷಯಗಳಲ್ಲಿ ಮತಗಟ್ಟೆಗಳನ್ನು ವಿಭಾಗಿಸಲಾಗಿದ್ದು, ಆಯಾಯ ವಿಷಯಗಳಿಗೆ ಸಂಬಂಧಪಟ್ಟ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಸಖಿ ಮತಗಟ್ಟೆಗಳಾಗಿ ಸ.ಹಿ.ಪ್ರಾ ಶಾಲೆ ಕಬಕ, ಸ.ಹಿ.ಪ್ರಾ.ಶಾಲೆ ಕೈಕಾರ, ಸ.ಹಿ.ಪ್ರಾ.ಶಾಲೆ ಹಿರೇಬಂಡಾಡಿ, ಸ.ಹಿ.ಪ್ರಾ.ಶಾಲೆ ಬಜತ್ತೂರು, ಸ.ಹಿ.ಪ್ರಾ.ಶಾಲೆ ಸಾಮೆತ್ತಡ್ಕ, ಸಾಂಪ್ರದಾಯಿಕ ಮತಗಟ್ಟೆಯಾಗಿ (ಕಂಬಳ) ಸ.ಹಿ.ಪ್ರಾ.ಶಾಲೆ ಕೋಡಿಂಬಾಡಿ, ಧ್ಯೇಯ ಆಧಾರಿತ ಮತಗಟ್ಟೆಯಾಗಿ ಸ.ಉ.ಹಿ.ಪ್ರಾ.ಶಾಲೆ ಕಾವು, ಯುವಜನ ನಿರ್ವಹಣೆ ಮತಗಟ್ಟೆಯಾಗಿ ಸರ್ವೆ ಸ.ಹಿ.ಪ್ರಾ.ಶಾಲೆ ವರ್ಣಮಯವಾಗಿ ಕಾಣಲಿದೆ.

ಮತಕೇಂದ್ರದ ಗೋಡೆಗಳಲ್ಲಿ ಕಲಾಚಿತ್ರಗಳ ಚಿತ್ತಾರ
ವೈವಿಧ್ಯಮಯ ಚಿತ್ರಗಳು ಜನರಿಗೆ ಮತಕೇಂದ್ರಕ್ಕೆ ಆಗಮಿಸುವಾಗ ಕಂಬಳ ಇನ್ನಿತರ ಚಿತ್ತಾರಗಳು ಎದುರುಗೊಳ್ಳಲಿವೆ. ಮಹಿಳಾ ಸಾಧಕಿಯರ ಚಿತ್ರಗಳು, ಪರಿಸರ ರಕ್ಷಣೆಯ ಅರಿವು, ವಿಶೇಷಚೇತನರ ಸಾಧನೆಗಳ ಅವತರಣಿಕೆ ಹೀಗೆ ಒಂದೇ ಎರಡೇ, ನಮ್ಮ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಮತದಾರರು ಕಣ್ತುಂಬಿಕೊಳ್ಳಬಹುದು. ಇಷ್ಟೇ ಅಲ್ಲದೇ ಮತದಾನದ ವಿಷಯಾಧಾರಿತ ಭಿತ್ತಿಚಿತ್ರಗಳು ನೋಡುಗರ ಕಣ್ಮನಗಳನ್ನು ಸೆಳೆಯಲಿವೆ.

ವಿಧಾನಸಭಾ ಕ್ಷೇತ್ರದ ಸ್ವೀಪ್‌ ಕಾರ್ಯಕ್ರಗಳ ಮುಖ್ಯಸ್ಥರಾಗಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಅವರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಎಸ್.ಆರ್.‌ ಅವರ ಮಾರ್ಗದರ್ಶನದಲ್ಲಿ ನುರಿತ ಚಿತ್ರಕಲಾ ಶಿಕ್ಷಕರ ತಂಡ ಚಿತ್ರಬಿಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೊಂಬೆಟ್ಟು ಸರಕಾರ ಪದವಿ ಪೂರ್ವ ಕಾಲೇಜಿನ ಚಿತ್ರ ಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ, ಕೆಯ್ಯೂರು ಕರ್ನಾಟಕ ಪಬ್ಲಿಕ್‌ ಶಾಲೆಯ ಚಿತ್ರ ಕಲಾ ಶಿಕ್ಷಕ ಪ್ರಕಾಶ್‌ ವಿಟ್ಲ, ನರಿಮೊಗ್ರು ಸಾಂದೀಪನಿ ವಿದ್ಯಾಸಂಸ್ಥೆಯ ಚಿತ್ರಕಲಾ ಶಿಕ್ಷಕ ಸುಚೇತ್ ಎಂ. ಅವರು ಮಾದರಿ ಮತಗಟ್ಟೆಗಳನ್ನು ವರ್ಣಮಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ವಿಭಿನ್ನ ಚಿತ್ರಗಳ ಮೂಲಕ ಕಂಗೊಳಿಸಲಿರುವ ಮತಗಟ್ಟೆಗಳು

ಮತಗಟ್ಟೆಗಳ ಗೋಡೆಗಳು ನೈಜ ಚಿತ್ರಗಳಿಂದ ಮೊದಲ್ಗೊಂಡು, ಮಧುಬನಿ ಕಲಾ ಶೈಲಿ, ವರ್ಲಿ ಕಲಾ ಶೈಲಿ, ಕಾರ್ಟೂನ್ ಚಿತ್ರಗಳು, ಅಲಂಕಾರಿಕ ಚಿತ್ರಗಳ ಮೂಲಕ ಕಂಗೊಳಿಸುವ ಕಾರ್ಯವನ್ನು ಚಿತ್ರಕಲಾ ಶಿಕ್ಷಕರು ಮಾಡುತ್ತಿದ್ದಾರೆ.
-ಹನಮ ರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ. ಪುತ್ತೂರು

Advertisement
Advertisement