Congress Guarantees : ಚುನಾವಣೆ ಮುಗಿಯುತ್ತಿದ್ದಂತೆ ಗ್ಯಾರಂಟಿ ರದ್ಧು ಮಾಡಲು ಶಾಸಕರಿಂದಲೇ ಒತ್ತಾಯ - ಸಿದ್ದರಾಮಯ್ಯ ಹೇಳಿದ್ದೇನು?!
Karnataka Guarantees: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ(Karnataka Government) ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ಕಂಪ್ಲೀಟ್ ಆಗಿದೆ. ಈ ಬೆನ್ನಲ್ಲೇ ಲೋಕಸಭಾ ಚುನಾವಣೆ(Parliament Election) ಕೂಡ ಮುಕ್ತಾಯವಾಗಿ ಫಲಿತಾಂಶ ಕೂಡ ಪ್ರಕಟವಾಗಿದೆ. ಹೀಗಾಗಿ ಹಿಂದೆ ಸದ್ದು ಮಾಡಿದ್ದ ಗ್ಯಾರಂಟಿ ರದ್ದು ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದೂ ಕೂಡ ಕಾಂಗ್ರೆಸ್ ಶಾಸಕರೇ(Congress MLA's)ಗ್ಯಾರಂಟಿ ರದ್ಧಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಹೌದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ತಾನು ಮಾತು ಕೊಟ್ಟಂತೆ ಐದು ಗ್ಯಾರಂಟಿಗಳಾದ(Congress Guarantees ) ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿದೆ. ಆರಂಭದಲ್ಲಿ ಇವುಗಳ ಕುರಿತು ಅಪಸ್ವರ, ಟೀಕೆ-ಟಿಪ್ಪಣಿಗಳು ಎದುರಾದರು ನಂತರ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಇದನ್ನೂ ಓದಿ: ಓಲೆಮುಂಡೋವು : ಕಾಡಾನೆ ಇರುವಿಕೆ ಪತ್ತೆ ,ಅರಣ್ಯ ಇಲಾಖೆ ಪರಿಶೀಲನೆ
ಆದರೆ ಸರ್ಕಾರ ಮಾತ್ರ ಇವುಗಳಿಗೆ ಹಣ ಹೊಂದಿಸುವ ಸಲುವಾಗಿ ಹೆಣಗಾಡುತ್ತಿದೆ. ದಿನನಿತ್ಯದ ವಸ್ತುಗಳ, ಮದ್ಯದ ದರವನ್ನು ಏರಿಸಿ ಹೇಗೋ ಒಂದು ವರ್ಷ ಯಶಸ್ವಿಯಾಗಿ ಗ್ಯಾರಂಟಿಗಳನ್ನು ತಲುಪಿಸಿದೆ. ಆದರೆ ಇನ್ನು ಮುಂದೆ ಏನು ಅನ್ನುವುದೇ ಯಕ್ಷ ಪ್ರಶ್ನೆ!! ಯಾಕೆಂದರೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಂಖ್ಯೆ ದೊರೆಯದ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ಕಾಂಗ್ರೆಸ್ ಶಾಸಕರು ರಾಜ್ಯ ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡಲು ಆರಂಭಿಸಿದ್ದಾರೆ.
ಯಸ್, ಕಾಂಗ್ರೆಸ್ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳು ಜಾರಿಯಲ್ಲಿರುವುದು ಏನಿದ್ದರೂ ಕೇವಲ ಒಂದು ವರ್ಷ, ಅದೂ ಕೂಡ ಲೋಕಸಭಾ ಚುನಾವಣೆ ಮುಗಿಯುವವರೆಗೂ ಮಾತ್ರ ಎಂಬ ವಿಚಾರವೊಂದು ಭಾರೀ ಸದ್ದು ಮಾಡಿತ್ತು. ವಿಧಾನಸಭಾ ಚುನಾವಣೆಯಲ್ಲಿ 135 ಸೀಟ್ ಗಳ ಭರ್ಜರಿ ಜಯ ಗಳಿಸಿದ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಯಲ್ಲಿ ಅದೇ ರೀತಿಯ ಗೆಲುವು ಪಡೆಯುವುದು ತುಂಬಾ ಮುಖ್ಯ, ಪ್ರತಿಷ್ಠೆಯಾಗಿತ್ತು.
ಹೀಗಾಗಿ ಗ್ಯಾರಂಟಿ ಅದಕ್ಕೆ ಪೂರಕವಾಗಿದೆ. ಬಳಿಕ ಯಾವುದಾದರು ನೆಪ ಒಡ್ಡಿ ಅದನ್ನು ಬಂದ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಜೊತೆಗೆ ಕೆಲವು ಕಾಂಗ್ರೆಸ್ ನಾಯಕರು, ಶಾಸಕರು, ಮಂತ್ರಿ ಮಹಾಶಯರು ಚುನಾವಣಾ ಪ್ರಚಾರದ ವೇಳೆ MP ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ದರೆ ಗ್ಯಾರಂಟಿಗಳನ್ನು ಬಂದ್ ಮಾಡುತ್ತೇವೆ ಎಂದು ಗಂಟಾಘೋಷವಾಗಿ ನುಡಿದಿದ್ದರು.
ಆದರೀಗ ಲೋಕಸಭಾ ಫಲಿತಾಂಶ ಹೊರಬಿದ್ದಿದೆ. ಕನಿಷ್ಠ 14 ಕ್ಷೇತ್ರಗಳಲ್ಲಿ ಗೆಲುವು ನಿರೀಕ್ಷಿಸಿದ್ದ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿದ್ದರೆ ಈ ಸಂಖ್ಯೆ 20 ಮುಟ್ಟಬಹುದು ಎಂದು ಭಾವಿಸಿದ್ದ ಕಾಂಗ್ರೆಸ್ಸಿಗರಿಗೆ 9 ಕ್ಷೇತ್ರಗಳಲ್ಲಿ ಗೆದ್ದಿರುವುದು ಸಮಾಧಾನ ತಂದಿಲ್ಲ. ಅದರಲ್ಲೂ ಮಹಿಳೆಯರಿಗೆ ನೇರವಾಗಿ ಮುಟ್ಟುವಂತಹ ಭಾಗ್ಯಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳಿಂದಾಗಿ ಈ ಚುನಾವಣೆಯಲ್ಲಿ ಪುರುಷರಲ್ಲದಿದ್ದರೂ ಮಹಿಳೆಯರು ಪಕ್ಷದ ಪರ ನಿಲ್ಲುತ್ತಾರೆ ಎಂದು ಬಲವಾಗಿ ಕಾಂಗ್ರೆಸ್ ನಂಬಿತ್ತು.
ಆದರೆ ಲೆಕ್ಕಾಚಾರ ತಲೆಕೆಳಗಾಗಿದೆ. ಗ್ಯಾರಂಟಿ ಬದಲಿಗೆ ಜಾತಿ ಕೈ ಹಿಡಿದಿದೆ. ಶಾಸಕರ ಅನುದಾನಕ್ಕೆ ಕತ್ತರಿ ಹಾಕಿ, ಅಭಿವೃದ್ಧಿ ಯೋಜನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಅನಗತ್ಯ ವೆಚ್ಚ ಮಾಡದೆ ಸರ್ಕಾರದ ಎಲ್ಲ ಆರ್ಥಿಕ ಸಂಪನ್ಮೂಲವನ್ನು ಗ್ಯಾರಂಟಿ ಯೋಜನೆಗಳ ಜಾರಿಗೆ ವ್ಯಯಿಸಲಾಗಿದೆ. ಅಧಿಕಾರಕ್ಕೆ ಬಂದ ಕೇವಲ ಒಂದು ವರ್ಷದಲ್ಲಿ ವಿಶ್ವದಲ್ಲಿ ಇನ್ನೆಲ್ಲೂ ಇಲ್ಲದಂತಹ ಯೋಜನೆಗಳನ್ನು ಜಾರಿ ಮಾಡಿ ದಾಖಲೆ ನಿರ್ಮಾಣ ಮಾಡಲಾಗಿದೆ. ಇಷ್ಟಾಗಿಯೂ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ ಎಂದರೆ ಗ್ಯಾರಂಟಿ ಯೋಜನೆಗಳು ಜನರ ಮನಸ್ಸು ಗೆದ್ದಿಲ್ಲ. ಹೀಗಾಗಿ ಈ ಯೋಜನೆಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಎಂಬುದು ಶಾಸಕರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಇಷ್ಟೇ ಅಲ್ಲದೆ ಕಾಂಗ್ರೆಸ್ನ ಕೆಲ ನಾಯಕರು ಅನೌಪಚಾರಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ವೇಳೆ ಗ್ಯಾರಂಟಿ ಯೋಜನೆ ಬಗ್ಗೆ ಪುನರ್ ಪರಿಶೀಲನೆ ನಡೆಯಬೇಕು ಎಂಬ ಅಭಿಪ್ರಾಯವನ್ನು ಬಹುತೇಕ ಶಾಸಕರು ಹೊಂದಿದ್ದಾರೆ ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಶಾಸಕರ ವಾದವೇನು?
- ಗ್ಯಾರಂಟಿಗಾಗಿ ಅಭಿವೃದ್ಧಿ ಹತೋಟಿಯಲ್ಲಿಡಲಾಗಿದೆ, ಶಾಸಕರ ಅನುದಾನಕ್ಕೆ ಕತ್ತರಿ ಹಾಕಲಾಗಿದೆ
- ರಾಜ್ಯದ ಎಲ್ಲ ಆರ್ಥಿಕ ಸಂಪನ್ಮಲಗಳನ್ನು ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ವ್ಯಯಿಸುತ್ತಿದೆ
- ಇಷ್ಟಾಗಿಯೂ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಆಗಿಲ್ಲ. ಇದರರ್ಥ, ಸ್ಕೀಂಗಳು ಜನರ ಮನಸ್ಸು ಗೆದ್ದಿಲ್ಲ
- ಭಾಗ್ಯಲಕ್ಷ್ಮೀ, ಶಕ್ತಿ ಯೋಜನೆ ಕಾರಣಕ್ಕೆ ಮಹಿಳೆಯರು ನೆರವಿಗೆ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಅದಾಗಿಲ್ಲ
- ಹೀಗಾಗಿ ರಾಜ್ಯದಲ್ಲಿ ಜಾರಿ ಮಾಡಲಾಗಿರುವ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆಯನ್ನು ನಡೆಸಬೇಕು
ಸಿದ್ದರಾಮಯ್ಯ ಹೇಳಿದ್ದೇನು?
ಶಾಸಕರು ಗ್ಯಾರಂಟಿ ಬಂದ್ ಮಾಡಿ ಎಂದು ಸಲಹೆ ನೀಡಲು ಬಂದಾಗ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲಾಗದು ಎಂದು ಈ ನಾಯಕರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.